Heart Health: ಹೃದಯಾಘಾತಗಳ ಹೆಚ್ಚಳಕ್ಕೆ ಕಾರಣವೇನು? ಆಸ್ಪತ್ರೆಗಳಿಗಿಂತ ಶಿಸ್ತಿನ ಜೀವನ ಏಕೆ ಮುಖ್ಯ? ನಿಮ್ಮ ಹೃದಯದ ಆರೋಗ್ಯ ಕಾಪಾಡಲು ಇಂದೇ ಬದಲಾವಣೆ ತನ್ನಿ.
ಹೃದಯಾಘಾತಗಳ ಹೆಚ್ಚಳ: ಆಸ್ಪತ್ರೆಗಳಲ್ಲ, ಬೇಕಿರುವುದು ಶಿಸ್ತಿನ ಬದುಕು!
ಬೆಂಗಳೂರು, ಜುಲೈ 03, 2025: ಆಧುನಿಕ ಜೀವನಶೈಲಿಯ ವೇಗ ಹೆಚ್ಚಾದಂತೆ, ಹೃದಯಾಘಾತಗಳ ಪ್ರಕರಣಗಳು ಆತಂಕಕಾರಿಯಾಗಿ ಏರುತ್ತಿವೆ. ಒಂದು ಕಡೆ ಸ್ವಿಗ್ಗಿ, ಜೊಮೆಟೊಗಳ ಮೂಲಕ ಹತ್ತು ನಿಮಿಷದಲ್ಲಿ ಬಯಸಿದ್ದೆಲ್ಲಾ ಕೈಗೆಟುಕಿದರೆ, ಇನ್ನೊಂದು ಕಡೆ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡಾಗ ತುರ್ತು ಚಿಕಿತ್ಸೆ ಗಂಟೆಗಳಾದರೂ ಸಿಗದಿರುವುದು ವಿಪರ್ಯಾಸ. ಆದರೆ, ಹೃದಯದ ಆರೋಗ್ಯಕ್ಕೆ ಬೇಕಿರುವುದು ಬರೀ ಆಸ್ಪತ್ರೆಗಳಲ್ಲ, ಬದಲಿಗೆ ನಮ್ಮ ಸ್ವಯಂಕೃತ ಅಪರಾಧಗಳನ್ನು ತಿದ್ದಿ ಶಿಸ್ತಿನ ಜೀವನವನ್ನು ರೂಪಿಸಿಕೊಳ್ಳುವುದು ಎಂಬ ಕಟು ಸತ್ಯವನ್ನು ನಾವು ಅರಿಯಬೇಕಿದೆ.
ಹೃದಯ ನೀಡುವ ಸೂಚನೆಗಳನ್ನು ಕಡೆಗಣಿಸುವಿಕೆ:
ಹಾರ್ಟ್ ಅಟ್ಯಾಕ್ ಯಾವುದೇ ಸೂಚನೆ ನೀಡದೆ ಒಮ್ಮೆಲೆ ಬರುತ್ತದೆ ಎಂಬುದು ತಪ್ಪು ಕಲ್ಪನೆ. ಹೃದಯ ನಮ್ಮ ದೇಹದ “ಅಮ್ಮ” ಇದ್ದಂತೆ. ಅದು ಆದಷ್ಟೂ ಸಹಿಸಿಕೊಂಡು, ಸಣ್ಣದಾಗಿ ಅಸಹನೆ ತೋರಿಸಿ, ಇನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿದಾಗಷ್ಟೇ ಸಿಡಿಯುತ್ತದೆ. ಹಾಗೆಯೇ, ಹೃದಯವೂ ಕೂಡ ನೂರಾರು ಬಾರಿ ಸೂಚನೆಗಳನ್ನು, ಎಚ್ಚರಿಕೆ ಗಂಟೆಗಳನ್ನು ನೀಡಿರುತ್ತದೆ. ಎದೆ ಹಿಡಿದಂತಾಗುವುದು, ಕೈ-ಕಾಲು, ಭುಜ, ಸೊಂಟ, ಕುತ್ತಿಗೆಯಲ್ಲಿ ಸೆಳೆತ, ಎದೆ ಉರಿ, ರಾತ್ರಿ ಬೆವರುವಿಕೆ, ಅಜೀರ್ಣತೆ, ಸುಸ್ತು ಹೀಗೆ ಅನೇಕ ಲಕ್ಷಣಗಳನ್ನು ದೇಹ ತೋರಿಸಿದರೂ, ನಾವು ಅದನ್ನು ‘ಗ್ಯಾಸ್ಟ್ರಿಕ್’ ಅಥವಾ ‘ವಾತ’ ಎಂದು ಕಡೆಗಣಿಸಿ, ಜೀರಿಗೆ, ಓಮದಕಾಳು ಸೇವಿಸಿ ಮಲಗಿಬಿಡುತ್ತೇವೆ. ತಜ್ಞ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ.
Heart Health: ದೇಹದ ನಿರ್ಲಕ್ಷ್ಯ:
ನಮ್ಮ ವಾಹನಗಳಲ್ಲಿ ಸಣ್ಣದೊಂದು ಶಬ್ದ ಬದಲಾದರೂ ತಕ್ಷಣ ಗ್ಯಾರೇಜಿಗೆ ತೆಗೆದುಕೊಂಡು ಹೋಗುತ್ತೇವೆ, ಸಾವಿರಾರು ಕಿ.ಮೀ ಓಡಿದರೆ ಸರ್ವಿಸ್ ಮಾಡಿಸುತ್ತೇವೆ. ಆದರೆ, ನಮ್ಮ ದೇಹದೊಳಗಿನ ಆಗುಹೋಗುಗಳನ್ನು ವರ್ಷಕ್ಕೊಮ್ಮೆಯಾದರೂ ಪರೀಕ್ಷಿಸಿಕೊಳ್ಳಲು ನಮಗೆ ಆಸಕ್ತಿಯಿಲ್ಲ. ಕಂಪನಿಗಳ ವತಿಯಿಂದ ಉಚಿತವಾಗಿ ಫುಲ್ ಬಾಡಿ ಚೆಕಪ್ ಅವಕಾಶ ಸಿಕ್ಕಿದರೂ, ಅದರ ವರದಿಯಲ್ಲಿ ಕೊಲೆಸ್ಟ್ರಾಲ್, ಬಿಪಿ, ವಿಟಮಿನ್ ಕೊರತೆ, ಯೂರಿಕ್ ಆಸಿಡ್ ಹೆಚ್ಚಳದಂತಹ ಸಮಸ್ಯೆಗಳು ಕಂಡುಬಂದರೂ ನಾವು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. “ಇವೆಲ್ಲಾ ಆಸ್ಪತ್ರೆಗಳ, ಮೆಡಿಕಲ್ ಮಾಫಿಯಾಗಳ ಷಡ್ಯಂತ್ರ, ಹಣ ಮಾಡುವ ದಂಧೆ” ಎಂಬಂತಹ ಪೂರ್ವಗ್ರಹ ಪೀಡಿತ ಮನಸ್ಥಿತಿಯೇ ನಮ್ಮ ಆರೋಗ್ಯದ ಅತಿದೊಡ್ಡ ಶತ್ರು.
ಕೋವಿಡ್ ನಂತರದ ಒತ್ತಡ ಮತ್ತು ಆಧುನಿಕ ಜೀವನಶೈಲಿ:
ಕೋವಿಡ್ ನಂತರದ ಲಾಕ್ಡೌನ್ನಿಂದ ಉಂಟಾದ ವ್ಯವಹಾರಗಳ ಏರುಪೇರು, ಕೆಲಸದ ಅನಿಶ್ಚಿತತೆ, ಸಾಲಗಳು ಬದುಕನ್ನು ಹೈರಾಣಾಗಿಸಿವೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇತರರ ‘ಹೈಫೈ’ ಜೀವನಶೈಲಿಯನ್ನು ನೋಡಿ, ನಾವೂ ಅತಿಯಾದ ಸಾಲ ಮಾಡಿ, ದುಂದುವೆಚ್ಚ ಮಾಡಿ, ಇನ್ನಿಲ್ಲದ ಒತ್ತಡಕ್ಕೆ ಸಿಲುಕುತ್ತಿದ್ದೇವೆ. ಇದಕ್ಕೆ ಶಿಸ್ತುರಹಿತ ಆಹಾರ, ವ್ಯಾಯಾಮವಿಲ್ಲದ ದೇಹ, ಯಕಶ್ಚಿತ್ ಜಂಕ್ ಫುಡ್ಗಳ ಅತಿಯಾದ ಸೇವನೆ ಮತ್ತು ಯೋಗ್ಯತೆ ಮೀರಿ ಮಾಡಿಕೊಳ್ಳುತ್ತಿರುವ ಕಮಿಟ್ಮೆಂಟ್ಗಳು ಸೇರಿಕೊಂಡು ನಮ್ಮ ಬದುಕನ್ನು ಮೂರಾಬಟ್ಟೆ ಮಾಡಿವೆ.
ನಮ್ಮ ಸುತ್ತಮುತ್ತಲಿನ ಕರಿದ ತಿಂಡಿಗಳ ಅಂಗಡಿಗಳು, ಬಿರಿಯಾನಿ ಹೋಟೆಲ್ಗಳು, ರಸ್ತೆ ಬದಿಯ ಕಬಾಬ್, ಗೋಬಿ, ಬೋಂಡಾ, ಬಜ್ಜಿ, ಜಿಲೇಬಿ, ಬರ್ಗರ್ ಮಳಿಗೆಗಳ ಮುಂದೆ ಜನಸಂದಣಿಯನ್ನು ನೋಡಿದರೆ, ಆರೋಗ್ಯದ ಕಾಳಜಿ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದು ಸ್ಪಷ್ಟವಾಗುತ್ತದೆ. ವೈನ್ ಶಾಪ್ಗಳಲ್ಲಿ ಯುವಜನತೆಯ ಸಂಖ್ಯೆಯು ನಮ್ಮ ಬದುಕಿನ ದಿಕ್ಸೂಚಿ ಬದಲಾಗಿರುವುದನ್ನು ಸಾರಿ ಹೇಳುತ್ತದೆ.

ಪರಿಹಾರ: ಮನೆಯೊಳಗಿನ ಹೃದಯ ಕಾಳಜಿ ಕೇಂದ್ರಗಳು! ಆರೋಗ್ಯಕರ ಹೃದಯಕ್ಕೆ ಶಿಸ್ತೇ ಮದ್ದು
ಆಸ್ಪತ್ರೆಗಳು ಬೇಕು ಎನ್ನುವುದು ತಪ್ಪಲ್ಲ. ಆದರೆ, ನಾವು ನಿಯಮಿತ ವಾಕಿಂಗ್, ದೇಹಕ್ಕೆ ಹಿತವಾದ ಆಹಾರ, ಅನಗತ್ಯ ಎಣ್ಣೆ ತಿಂಡಿ ಮತ್ತು ಜಂಕ್ ಫುಡ್ಗಳಿಂದ ಅಂತರ ಕಾಯ್ದುಕೊಳ್ಳುವುದು, ಮನಸ್ಸಿಗೆ ಧ್ಯಾನ-ಪ್ರಾಣಾಯಾಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಿಸ್ತಿನ ಜೀವನಶೈಲಿಯನ್ನು ರೂಪಿಸಿಕೊಂಡಲ್ಲಿ ಆಸ್ಪತ್ರೆಗಳನ್ನು ಹುಡುಕಾಡುವ ಅಗತ್ಯವೇ ಇರುವುದಿಲ್ಲ. ನಾವೇ ಈ ಎಲ್ಲಾ ಅನಾರೋಗ್ಯಕರ ಅಭ್ಯಾಸಗಳಿಗೆ ನಮ್ಮ ಮಕ್ಕಳನ್ನೂ ದೂಡಿ, ಸುಖವಾಗಿದ್ದೇವೆಂದು ಭ್ರಮಿಸುತ್ತಿದ್ದೇವೆ.
ಈ ಪುಟ್ಟ ಹೃದಯವು ಇನ್ನೆಷ್ಟು ತಾನೇ ಸಹಿಸಿಕೊಳ್ಳಲು ಸಾಧ್ಯ? ನಮಗೆ ಈಗ ತುರ್ತಾಗಿ ಬೇಕಿರುವುದು ಬೃಹತ್ ಆಸ್ಪತ್ರೆಗಳಿಗಿಂತಲೂ ಹೆಚ್ಚಾಗಿ, ಪ್ರತಿ ಮನೆಯೊಳಗೂ ನಾವೇ ಕಟ್ಟಿಕೊಳ್ಳಬೇಕಾಗಿರುವ “ಹೃದಯದ ಕಾಳಜಿ ಕೇಂದ್ರಗಳು”. ಆರೋಗ್ಯಕರ ಜೀವನಶೈಲಿಯನ್ನು ನಮ್ಮದಾಗಿಸಿಕೊಳ್ಳುವುದು ಮತ್ತು ಅದರ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ.
Read More: Top 10 Proven Weight Loss Tips That Actually Work – Start Your Healthy Journey Today!
🔗ಕಲ್ಲಂಗಡಿ ಹಣ್ಣಿಗೆ ಬಣ್ಣ ಇಂಜೆಕ್ಷನ್ ಮಾಡಲಾಗುತ್ತದಾ? ಸತ್ಯಾಸತ್ಯತೆ ಏನು
ಇಂತಹ ಆರೋಗ್ಯ ಮತ್ತು ಹೆಲ್ತ್ ಟಿಪ್ಸ್ ಗಳ ಬಗ್ಗೆ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button 👇